ಪಿಂಕ್ 2016 ರ ಒಂದು ಹಿಂದಿ ಸಾಮಾಜಿಕ ರೋಮಾಂಚಕ ಚಲನಚಿತ್ರ. ಇದನ್ನು ಅನಿರುದ್ಧ ರಾಯ್ ಚೌಧರಿ ನಿರ್ದೇಶಿಸಿದ್ದಾರೆ, ರಿತೇಶ್ ಷಾ ಬರೆದಿದ್ದಾರೆ ಮತ್ತು ರಶ್ಮಿ ಶರ್ಮಾ ಟೆಲಿಫಿಲ್ಮ್ಸ್ (ಪವನ್ ಕುಮಾರ್ ಹಾಗೂ ರಶ್ಮಿ ಶರ್ಮಾ), ಶೀಲ್ ಕುಮಾರ್ ಹಾಗೂ ಶೂಜಿತ್ ಸರ್ಕಾರ್ ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ಅಮಿತಾಭ್ ಬಚ್ಚನ್, ತಾಪ್ಸಿ ಪನ್ನು, ಕೀರ್ತಿ ಕುಲ್ಹಾರಿ, ಆ್ಯಂಡ್ರಿಯಾ ಟಾರಿಯಾಂಗ್, ಅಂಗದ್ ಬೇದಿ, ತುಷಾರ್ ಪಾಂಡೆ, ಪಿಯೂಷ್ ಮಿಶ್ರಾ, ಮತ್ತು ಧೃತಿಮಾನ್ ಚ್ಯಾಟರ್ಜಿ ನಟಿಸಿದ್ದಾರೆ. ಇದು 16 ಸೆಪ್ಟೆಂಬರ್ 2016 ರಂದು ಬಿಡುಗಡೆಯಾಯಿತು. ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯು (ಸಿಬಿಎಫ್‌ಸಿ) ಈ ಚಿತ್ರಕ್ಕೆ ಅ / ವ ಪ್ರಮಾಣಪತ್ರವನ್ನು ನೀಡಿತು. ಈ ಚಿತ್ರವು ವ್ಯಾಪಕ ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆಯಿತು ಮತ್ತು ಇತರ ಸಾಮಾಜಿಕ ವಿಷಯಗಳ ಮೇಲಿನ ಅತ್ಯುತ್ತಮ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದಿತು. ಮಹಿಳಾ ಹಕ್ಕುಗಳು ಮತ್ತು ಘನತೆಯ ಬಗ್ಗೆ ಸೂಕ್ಷ್ಮ ಮತ್ತು ಸಂವೇದನಾಶೀಲರಾಗಿರಲು ತರಬೇತಿ ನೀಡುವ ಸಲುವಾಗಿ ಈ ಚಿತ್ರವನ್ನು ರಾಜಸ್ಥಾನ್ ಪೊಲೀಸರಿಗಾಗಿ ವಿಶೇಷವಾಗಿ ಪ್ರದರ್ಶಿಸಲಾಯಿತು. ಈ ಚಿತ್ರವನ್ನು ರಾಷ್ಟ್ರಪತಿ ಭವನದಲ್ಲಿಯೂ ವಿಶೇಷವಾಗಿ ಪ್ರದರ್ಶಿಸಲಾಯಿತು. 4 ನವೆಂಬರ್ 2016 ರಂದು ಈ ಚಲನಚಿತ್ರವು ಚಿತ್ರಮಂದಿರಗಳಲ್ಲಿ 50 ದಿನಗಳ ಓಟವನ್ನು ಪೂರ್ಣಗೊಳಿಸಿತು. == ಕಥಾವಸ್ತು == ರಾಜ್‍ವೀರ್ ತಲೆಗೆ ಭಾರೀ ಗಾಯದಿಂದ ರಕ್ತಸ್ರಾವವಾಗಿರುವುದರಿಂದ ಮೂವರು ಶ್ರೀಮಂತ ಪುರುಷರಾದ ರೌನಕ್, ವಿಶ್ವಜ್ಯೋತಿ, ಮತ್ತು ರಾಜ್‍ವೀರ್ ಸಿಂಗ್ ಹತ್ತಿರದ ಆಸ್ಪತ್ರೆಗೆ ಧಾವಿಸುತ್ತಾರೆ. ಅದೇ ಸಮಯದಲ್ಲಿ, ಮೂವರು ಮಹಿಳೆಯರು - ಮೀನಲ್, ಫಲಕ್ ಮತ್ತು ಆ್ಯಂಡ್ರಿಯಾ - ಟ್ಯಾಕ್ಸಿಯಲ್ಲಿ ತಮ್ಮ ಅಪಾರ್ಟ್‌ಮೆಂಟ್‌ಗೆ ಹಿಂತಿರುಗುತ್ತಾರೆ. ಅವರು ಕಕ್ಕಾಬಿಕ್ಕಿಯಾದಂತೆ ಕಾಣುತ್ತಾರೆ, ಮತ್ತು ಈ ಘಟನೆಯೊಂದಿಗೆ ಅವರಿಗೆ ಏನೋ ಸಂಬಂಧವಿದೆ ಎಂದು ಸೂಚಿತವಾಗುತ್ತದೆ. ಆ ಮೂವರು ಮಹಿಳೆಯರು ಸ್ವತಂತ್ರರಾಗಿದ್ದು ಒಟ್ಟಿಗೆ ವಾಸಿಸುತ್ತಾರೆ. ಆ ರಾತ್ರಿ ಸಂಭವಿಸಿದ ಘಟನೆಯಿಂದ ಅವರು ಮುಂದುವರಿಯಲು ಪ್ರಯತ್ನಿಸುತ್ತಾರೆ. ಮೀನಲ್‍ಳ ಬೆಳಿಗ್ಗೆಯ ಓಟಗಳ ವೇಳೆ, ಅವಳ ನೆರೆಹೊರೆಯ ಓರ್ವ ವಯಸ್ಸಾದ ವ್ಯಕ್ತಿ ದೀಪಕ್ ಅವಳನ್ನು ಗಮನಿಸುತ್ತಾನೆ ಮತ್ತು ಏನೋ ತಪ್ಪಾಗಿದೆ ಎಂದು ಗ್ರಹಿಸುತ್ತಾನೆ. ರಾಜ್‍ವೀರ್‌ನ ಸ್ನೇಹಿತ ಅಂಕಿತ್‍ನಿಂದ ಬೆದರಿಕೆಗಳು ಉದ್ಭವಿಸುತ್ತವೆ. ಅವನು ಮೀನಲ್ ರಾಜ್‍ವೀರ್‌ಗೆ ಮಾಡಿದ ಗಾಯಕ್ಕೆ ಸೇಡು ತೀರಿಸಿಕೊಳ್ಳಲು ಒತ್ತಾಯಿಸುತ್ತಾನೆ. ಬೆದರಿಕೆಗಳ ಕಾರಣ ಫಲಕ್ ತನ್ನ ಕೆಲಸವನ್ನು ಕಳೆದುಕೊಳ್ಳುತ್ತಾಳೆ. ಇದು ಅವರ ದೈನಂದಿನ ಜೀವನವನ್ನು ಹೆಚ್ಚು ಶೋಚನೀಯವಾಗಿಸುತ್ತದೆ ಎಂದು ಹೇಳಿ ಅವರು ದೂರು ದಾಖಲಿಸುವುದನ್ನು ವಿರೋಧಿಸಲಾಗುತ್ತದೆ. ವಾಸ್ತವದಲ್ಲಿ, ಪುರುಷರು "ಉತ್ತಮ ಸಂಪರ್ಕ ಹೊಂದಿದ್ದಾರೆ" ಮತ್ತು ಪ್ರಭಾವಿ ರಾಜಕಾರಣಿಯಾದ ರಾಜ್‍ವೀರ್‌ನ ಚಿಕ್ಕಪ್ಪ ರಂಜೀತ್‍ನ ಬೆಂಬಲವಿದೆ ಎಂದು ಸ್ಥಳೀಯ ಪೊಲೀಸರಿಗೆ ತಿಳಿದಿರುತ್ತದೆ. ಮೀನಲ್ ಉನ್ನತ ಸ್ಥಾನದಲ್ಲಿರುವ ಪೊಲೀಸ್ ಅಧಿಕಾರಿಯ ಬಳಿ ಹೋಗಿ ದೂರು ದಾಖಲಿಸುತ್ತಾಳೆ. ಮರುದಿನ, ಅವಳನ್ನು ರಾಜವೀರ್‌ನ ಸ್ನೇಹಿತರು ಅಪಹರಿಸುತ್ತಾರೆ. ಘಟನೆಯನ್ನು ದೀಪಕ್ ವೀಕ್ಷಿಸಿದರೂ ಸಹಾಯ ಮಾಡಲು ಸಾಧ್ಯವಾಗುವುದಿಲ್ಲ. ಚಲಿಸುವ ಕಾರಿನಲ್ಲಿ ಮೀನಲ್‌ಗೆ ಬೆದರಿಕೆ ಹಾಕಿ, ಒತ್ತಡ ಹಾಕಿ, ಅಸಭ್ಯವಾಗಿ ವರ್ತಿಸಿ ಅವಳನ್ನು ಮನೆಗೆ ಬಿಡಲಾಗುತ್ತದೆ. ಅವಳು ಕ್ಷೋಭೆಗೊಳ್ಳುತ್ತಾಳೆ. ಕೆಲವು ದಿನಗಳ ನಂತರ, ಮಹಿಳೆಯರು ವೇಶ್ಯೆಯರೆಂದು ಹಣೆಪಟ್ಟಿ ಕಟ್ಟಿ, ಮೀನಲ್ ಮೇಲೆ ಕೊಲೆ ಯತ್ನ ಆರೋಪ ಹೊರಿಸಿ ರಾಜ್‍ವೀರ್‌ನಿಂದ ಬಂದ ದೂರಿನ ಆಧಾರದ ಮೇಲೆ ಆಕೆಯನ್ನು ಬಂಧಿಸಲಾಗುತ್ತದೆ. ಈ ಸಮಯದಲ್ಲಿ, ದೀಪಕ್ ಘಟನೆಗಳಿಂದ ನಿರಾಶೆಗೊಂಡು ತಾನು ನಿವೃತ್ತಿಯಲ್ಲಿರುವ ಪ್ರತಿಷ್ಠಿತ ವಕೀಲನೆಂದು ಪರಿಚಯಿಸಿಕೊಳ್ಳುತ್ತಾನೆ. ಅವನು ಫಲಕ್ ಮತ್ತು ಆ್ಯಂಡ್ರಿಯಾಗೆ ಜಾಮೀನು ಪ್ರಕ್ರಿಯೆಗಳಲ್ಲಿ ನೆರವಾಗಿ ನ್ಯಾಯಾಲಯದಲ್ಲಿ ಮೀನಲ್‌ಳನ್ನು ಪ್ರತಿನಿಧಿಸಲು ನಿರ್ಧರಿಸುತ್ತಾನೆ. ನ್ಯಾಯಾಲಯದಲ್ಲಿ, ರಾಜ್‍ವೀರ್‌ನ ವಕೀಲ ಪ್ರಶಾಂತ್ ಮೆಹ್ರಾ ಘಟನೆಗಳ ಈ ಮುಂದಿನ ವರದಿಯನ್ನು ಪ್ರಸ್ತುತಪಡಿಸುತ್ತಾನೆ: ರಾಜ್ವೀರ್ ಮತ್ತು ಅವನ ಸ್ನೇಹಿತರು ಮೀನಲ್ ಮತ್ತು ಅವಳ ಸ್ನೇಹಿತೆಯರನ್ನು ಒಂದು ರಾಕ್ ಕನ್ಸರ್ಟ್‌ನಲ್ಲಿ ಭೇಟಿಯಾಗುತ್ತಾರೆ. ಅವರು ಮಹಿಳೆಯರನ್ನು ಒಂದು ರೆಸಾರ್ಟ್‌ನಲ್ಲಿ ಭೋಜನಕ್ಕೆ ಆಹ್ವಾನಿಸುತ್ತಾರೆ. ಅಲ್ಲಿ ಅವರು ಪಾನೀಯಗಳನ್ನು ಸೇವಿಸುತ್ತಾರೆ. ಮಹಿಳೆಯರು ಪುರುಷರನ್ನು ಪ್ರಚೋದಿಸಿ ಹತ್ತಿರವಾಗುತ್ತಾರೆ, ಮತ್ತು ನಂತರ ಹಣವನ್ನು ಬೇಡುತ್ತಾರೆ. ಈ ಎಲ್ಲ ಸಂಕೇತಗಳು ಅವರು ವೇಶ್ಯೆಯರು ಎಂದು ಸೂಚಿಸುತ್ತವೆ. ರಾಜ್‍ವೀರ್ ಹಣ ಕೊಡಲು ನಿರಾಕರಿಸಿದಾಗ ಕೋಪಗೊಂಡ ಮೀನಲ್ ಅವನ ತಲೆಯ ಮೇಲೆ ಬಾಟಲಿಯಿಂದ ಹೊಡೆದು ಓಡಿಹೋಗುತ್ತಾಳೆ. ಪ್ರಶಾಂತ್‍ನ ವಾದವು ಮಹಿಳೆಯರ ಕಳಪೆ ನೈತಿಕ ನಡತೆಯ ಮೇಲೆ ಕೇಂದ್ರೀಕರಿಸುತ್ತದೆ. ಮೀನಲ್ ದೆಹಲಿಯಲ್ಲಿ ಕುಟುಂಬವನ್ನು ಹೊಂದಿದ್ದರೂ ಒಬ್ಬಂಟಿಯಾಗಿ ವಾಸಿಸಲು ಆಯ್ದುಕೊಂಡಿರುತ್ತಾಳೆ ಎಂಬ ಅಂಶವನ್ನು ಅವನು ನಿಂದಿಸುತ್ತಾನೆ. ಮೀನಲ್ ಮತ್ತು ಅವಳ ಸ್ನೇಹಿತರ ಹೇಳಿಕೆ ಹೀಗಿರುತ್ತದೆ: ಪುರುಷರು ಲೈಂಗಿಕ ದೌರ್ಜನ್ಯವೆಸಗಲು ಯತ್ನಿಸಿದರು. ರಾಜ್ವೀರ್ ಮೀನಲ್ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದನು. ಅವಳು ಸ್ವರಕ್ಷಣೆಗಾಗಿ ಬಾಟಲಿಯಿಂದ ಅವನ ಮೇಲೆ ಹಲ್ಲೆ ಮಾಡಿದಳು. ದೀಪಕ್‍ನ ವಾದವು ಒಪ್ಪಿಗೆ ಮತ್ತು ಇಲ್ಲ ಎನ್ನುವ ಮಹಿಳೆಯ ಹಕ್ಕಿನ ವಿಷಯದ ಮೇಲೆ ಕೇಂದ್ರೀಕರಿಸುತ್ತದೆ. ಮುಂದಿನ ದಿನಗಳಲ್ಲಿ ನ್ಯಾಯಾಲಯದಲ್ಲಿ ಭಯಂಕರ ವಾದಗಳ ಸರಣಿಯು ಸಂಭವಿಸುತ್ತದೆ. ವಿಚಾರಣೆಯ ಕೊನೆಯು ಸಮೀಪಿಸಿದಂತೆ, ರಾಜ್ವೀರ್ ಕೋಪಗೊಂಡು ಮತ್ತು ದೀಪಕ್‍ನಿಂದ ಪ್ರಚೋದಿಸಲ್ಪಟ್ಟು ಮಹಿಳೆಯರು "ಅವರು ಅರ್ಹವಾದದ್ದನ್ನು ಪಡೆದರು" ಎಂದು ಹೇಳಿ ಸತ್ಯವನ್ನು ಬಹಿರಂಗಪಡಿಸುತ್ತಾನೆ. ತಡವಾಗಿ ಮನೆಗೆ ಬಂದರೆ, ಹೊರನಡೆದರೆ, ಸ್ವತಂತ್ರವಾಗಿರಲು ಬಯಸಿದರೆ, ಕುಡಿಯಲು ಬಯಸಿದರೆ, ಇತ್ಯಾದಿಯನ್ನು ಮಾಡಿದರೆ ಮಹಿಳೆಯರನ್ನು ವೇಶ್ಯೆಯರೆಂದು ಪಡಿಯಚ್ಚು ಮಾಡುವ ಸಮಾಜದ ನಿವರ್ತಿತ ಅಭಿಪ್ರಾಯಗಳನ್ನು ದೀಪಕ್ ಟೀಕಿಸುತ್ತಾನೆ, ಆದರೆ ಇವುಗಳಲ್ಲಿ ಯಾವುದೂ ಪುರುಷರಿಗೆ ಅನ್ವಯಿಸುವುದಿಲ್ಲ. ತನ್ನ ಕಕ್ಷೀದಾರಿಣಿಯು “ಇಲ್ಲ” ಎಂದು ಹೇಳಿದ ವಾಸ್ತವಾಂಶದಿಂದ ಅವನು ಮುಗಿಸುತ್ತಾನೆ. ಇಲ್ಲ ಎಂದರೆ ಇಲ್ಲ, ಮತ್ತು ಅದಕ್ಕೆ ಹೆಚ್ಚಿನ ವಿವರಣೆಯ ಅಗತ್ಯವಿಲ್ಲ. ರಾಜ್ವೀರ್, ಅಂಕಿತ್, ಮತ್ತು ರೌನಕ್ ಮೇಲೆ ತಪ್ಪುಹೊರಿಸಿ, ಅವರಿಗೆ ಶಿಕ್ಷೆ ವಿಧಿಸುವುದು ಉಳಿದಿರುತ್ತದೆ. ವಿಶ್ವಜ್ಯೋತಿಯನ್ನು ಎಚ್ಚರಿಕೆ ಕೊಟ್ಟು ಬಿಡಲಾಗುತ್ತದೆ. ಅಂತಿಮ ನಾಮೋಲ್ಲೇಖದ ದೃಶ್ಯವು ನಿಜವಾಗಿ ಏನಾಯಿತು ಎಂಬುದನ್ನು ಬಹಿರಂಗಪಡಿಸುತ್ತದೆ: ಪುರುಷರು ವ್ಯವಸ್ಥಿತವಾಗಿ ಮಹಿಳೆಯರನ್ನು ಪ್ರತ್ಯೇಕಿಸಿ ನಂತರ ರಾಜ್ವೀರ್ ಮೀನಲ್ ಮೇಲೆ ಬಲವಂತ ಮಾಡಲು ಪ್ರಯತ್ನಿಸಿದನು. ಅವಳು ಆತ್ಮರಕ್ಷಣೆಗಾಗಿ ಅವನ ತಲೆಗೆ ಬಾಟಲಿಯಿಂದ ಹೊಡೆದಳು. == ಪಾತ್ರವರ್ಗ == == ತಯಾರಿಕೆ == ಮಾರ್ಚ್ 2016 ರ ಆರಂಭದಲ್ಲಿ ಅಮಿತಾಭ್ ಬಚ್ಚನ್ ಅವರು ಒಂದು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ ಎಂದು ಬಹಿರಂಗಪಡಿಸಿದರು. ಚಿತ್ರಕ್ಕೆ ಪಿಂಕ್ ಎಂದು ಹೆಸರಿಡಲಾಗಿದೆ ಎಂದು ಟ್ವಿಟರ್ ಮೂಲಕ ಘೋಷಿಸಿದರು. ತುಷಾರ್ ಪಾಂಡೆ, ರಾಶುಲ್ ಟಂಡನ್ ಮತ್ತು ಅರ್ಜುನ್ ಚಕ್ರವರ್ತಿ ಈ ಚಿತ್ರದ ಮೂಲಕ ಪಾದಾರ್ಪಣೆ ಮಾಡುತ್ತಿದ್ದಾರೆ. === ಚಿತ್ರೀಕರಣ === ಚಿತ್ರದ ಪ್ರಧಾನ ಛಾಯಾಗ್ರಹಣವು 2016 ರ ಅಂತರರಾಷ್ಟ್ರೀಯ ಮಹಿಳಾ ದಿನದಂದು ನವದೆಹಲಿಯಲ್ಲಿ ಪ್ರಾರಂಭವಾಯಿತು. ಚಿತ್ರದಲ್ಲಿ ಅಮಿತಾಭ್ ಬಚ್ಚನ್‍ರ ರೂಪವನ್ನು ಶೂಜಿತ್ ಸಿರ್ಕಾರ್ ಸೃಷ್ಟಿಸಿದ್ದಾರೆ. ಆದರೆ ದೆಹಲಿ ಬಹಳ ಕಲುಷಿತಗೊಂಡಿರುವುದರಿಂದ ಮುಖವಾಡ ಧರಿಸುವ ಕಲ್ಪನೆಯನ್ನು ಅಮಿತಾಭ್ ಬಚ್ಚನ್ ಸೂಚಿಸಿದ್ದರು. ಚಿತ್ರೀಕರಣದ ವೇಳೆ, ಅಮಿತಾಭ್ ಬಚ್ಚನ್ ನವದೆಹಲಿಯ ಬೀದಿಗಳಲ್ಲಿ ವೇಷಭೂಷಣವನ್ನು ಧರಿಸಿ ಅಲೆದಾಡಿದರೂ ಸಾರ್ವಜನಿಕರು ಅವರನ್ನು ಗುರುತಿಸಲು ಸಾಧ್ಯವಾಗಲಿಲ್ಲ. ಅಮಿತಾಭ್ ಬಚ್ಚನ್ ತಮ್ಮ ದೃಶ್ಯಗಳ ಚಿತ್ರೀಕರಣವನ್ನು ಏಪ್ರಿಲ್ 2016 ರಲ್ಲಿ ಮುಗಿಸಿದರು. === ಮಾರಾಟಗಾರಿಕೆ === ಈ ಚಿತ್ರದ ವಿಶ್ವ ದೂರದರ್ಶನ ಪ್ರಥಮ ಪ್ರದರ್ಶನವು 23 ಅಕ್ಟೋಬರ್ ೨೦೧೬ ರಂದು ಸ್ಟಾರ್ ಗೋಲ್ಡ್‌ನಲ್ಲಿ ನಡೆಯಿತು. ಚಿತ್ರದ ಶೀರ್ಷಿಕೆಯು ಹುಡುಗಿಯರ ನೆಚ್ಚಿನ ಬಣ್ಣ ಆಗಿರುವುದಕ್ಕೆ ಯಾವುದೇ ಸಂಬಂಧವನ್ನು ಹೊಂದಿಲ್ಲ. ಬದಲಾಗಿ ಮಹಿಳೆಯರಿಗೆ ರಾತ್ರಿಯಲ್ಲಿ ಮುಕ್ತವಾಗಿ ಮಾತನಾಡಲು ಮತ್ತು ನಡೆಯಲು ಸ್ವಾತಂತ್ರ್ಯವಿರಬೇಕು ಎಂದು ತಿಳಿಸುತ್ತದೆ. == ಧ್ವನಿವಾಹಿನಿ == == ಬಾಕ್ಸ್ ಆಫ಼ಿಸ್ == ಭಾರತದಲ್ಲಿ ಮೊದಲ 10 ದಿನಗಳಲ್ಲಿ ಪಿಂಕ್ ₹50 ಕೋಟಿಯಷ್ಟು ಗಳಿಸಿತು. == ಪ್ರಶಸ್ತಿ ಗೌರವಗಳು == ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು - ೭ ಎಪ್ರಿಲ್ ೨೦೧೭ ಸಾಮಾಜಿಕ ಸಮಸ್ಯೆಗಳ ಮೇಲಿನ ಅತ್ಯುತ್ತಮ ಚಲನಚಿತ್ರ - ನಿರ್ದೇಶಕ: ಅನಿರುದ್ಧ್ ರಾಯ್ ಚೌಧರಿ, ನಿರ್ಮಾಪಕ: ರಶ್ಮಿ ಶರ್ಮಾ ಫ಼ಿಲ್ಮ್ಸ್ - ಗೆಲುವು ಫಿಲ್ಮ್‌ಫೇರ್ ಪ್ರಶಸ್ತಿಗಳು - ೧೪ ಜನವರಿ ೨೦೧೭ ಅತ್ಯುತ್ತಮ ಚಲನಚಿತ್ರ - ರಶ್ಮಿ ಶರ್ಮಾ, ಪವನ್ ಕುಮಾರ್, ಶೂಜಿತ್ ಸರ್ಕಾರ್ ಮತ್ತು ಶೀಲ್ ಕುಮಾರ್ - ನಾಮನಿರ್ದೇಶಿತ ಅತ್ಯುತ್ತಮ ನಟ - ಅಮಿತಾಭ್ ಬಚ್ಚನ್ - ನಾಮನಿರ್ದೇಶಿತ ಅತ್ಯುತ್ತಮ ಪೋಷಕ ನಟಿ - ಕೀರ್ತಿ ಕುಲ್ಹಾರಿ - ನಾಮನಿರ್ದೇಶಿತ ಅತ್ಯುತ್ತಮ ಹಿನ್ನೆಲೆ ಗಾಯಕಿ - ಕುರತ್ ಉಲ್ ಐನ್ ಬಲೌಚ್ ("ಕಾರಿ ಕಾರಿ" ಹಾಡಿಗಾಗಿ) - ನಾಮನಿರ್ದೇಶಿತ ಅತ್ಯುತ್ತಮ ಸಂಭಾಷಣೆ - ರಿತೇಶ್ ಶಾ - ಗೆಲುವು == ರೀಮೇಕ್ == ಪಿಂಕ್‌ ಚಿತ್ರವನ್ನು 2019 ರಲ್ಲಿ ತಮಿಳಿನಲ್ಲಿ ನೆರ್ಕೊಂಡ ಪಾರ್ವೈ ಎಂದು ರೀಮೇಕ್ ಮಾಡಲಾಯಿತು. ಇದು 8 ಆಗಸ್ಟ್ 2019 ರಂದು ಬಿಡುಗಡೆಯಾಯಿತು. ಈ ಚಲನಚಿತ್ರವು ಪ್ರೇಕ್ಷಕರಿಂದ ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು. ಈ ಚಲನಚಿತ್ರವು ದಕ್ಷಿಣ ಭಾರತದ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿ ಯೋಜನೆ ಎನಿಸಿಕೊಂಡಿತು. ಇದನ್ನು ತೆಲುಗಿನಲ್ಲಿ ಪವನ್ ಕಲ್ಯಾಣ್ ನಟನೆಯಲ್ಲಿ ವಕೀಲ್ ಸಾಬ್ ಎಂದು ರೀಮೇಕ್ ಮಾಡಲಾಗುತ್ತಿದೆ. == ಗ್ರಂಥಸೂಚಿ == , (2017). : . . 9352770390., (2017). : . . 9352770390. , (2017). : . . 9352770390. == ಉಲ್ಲೇಖಗಳು == == ಹೊರಗಿನ ಕೊಂಡಿಗಳು == ಪಿಂಕ್ @ ಐ ಎಮ್ ಡಿ ಬಿ ಪಿಂಕ್ ಟೆಂಪ್ಲೇಟು: